ಸುತ್ತ ನೆರೆದಿದ್ದ ಹಸ್ತಿನಾವತಿಯ ಸಮಸ್ತರ ಮಧ್ಯೆ, `ನೀನು ಯಾರ ಮಗ ?' ಎಂಬ ಕೃಪಾಚಾರ್ಯರ ಪ್ರಶ್ನೆಯು, ಕರ್ಣನ ಕಿವಿಗಳಿಗೆ ಕಠೋರವಾಗಿಯೇ ಕೇಳಿತು. ಅವನ ಪರವಾಗಿ ಉತ್ತರಿಸುವದಕ್ಕೆ ಅಲ್ಲಿ ಯಾರೂ ಇರಲಿಲ್ಲ. ತಲೆತಗ್ಗಿಸಿದ, ಹಿಂಜರಿದ, ಮುಜುಗರದ ಮುದ್ದೆಯಾದ. `ನೀವು ದೇವತೆಗಳಿಂದಲೇ ಹುಟ್ಟಿದ ಪಾಂಡವರೇ?' ಅಂತ ಯಾರೊಬ್ಬನೂ ಕೇಳಲಿಲ್ಲ. ಅವರ ಜತೆ ಋಷಿಗಳಿದ್ದರು, ಕುಂತಿಯಿದ್ದಳು. ಕಾಡಿನಿಂದ ಬಂದವರನ್ನು ಸೇರಿಸಿಕೊಂಡಿತು ಹಸ್ತಿನಾವತಿ . ದೊಡ್ಡವರ ಮಕ್ಕಳಾದರೆ ತಲೆಯೆತ್ತಿ ಎದೆಯುಬ್ಬಿಸಿ ನಡೆವ ಚೆಂದವೇ ಬೇರೆ. ಅಪ್ಪನಿಲ್ಲದ ಮಕ್ಕಳ ಸಂಕಟ ಅನುಭವಿಸಿದವರೇ ಬಲ್ಲರು.
ದ್ವಾಪರಯುಗದಲ್ಲಿ ಮೆರೆದ ಚಂದ್ರ ವಂಶಜರ ಪಟ್ಟಿ ಎಷ್ಟುದ್ದ ಇದೆಯೆಂದರೆ - ಚಂದ್ರನಿಂದ ಜನಮೇಜಯನವರೆಗೆ ಚಂದ್ರವಂಶದ ಸುಮಾರು ಇಪ್ಪತ್ತು ತಲೆಮಾರುಗಳ ಹೆಸರು ಹೇಳುತ್ತದೆ ಮಹಾಭಾರತ. ಮಹಾಭಾರತದಲ್ಲಿ ಒಂದು ಕುಟುಂಬದ ಕತೆಯು ಮಾನವ ಜನಾಂಗದ ಕತೆಯಾಗಿ ನಮ್ಮನ್ನು ರೋಮಾಂಚನಗೊಳಿಸಿದಂತೆ, ಅಮೆರಿಕದ ಅಲೆಕ್ಸ್ ಹೇಲಿಯು `ರೂಟ್ಸ್' ಕಾದಂಬರಿಯಲ್ಲಿ ಹೇಳಿದ ನಿಜದ ಕತೆಯೂ ಮತ್ತೊಂದು ಮಹಾಭಾರತದಂತಿದೆ. (ಅದನ್ನು `ತಲೆಮಾರು' ಹೆಸರಿನಲ್ಲಿ ಬಂಜಗೆರೆ ಜಯಪ್ರಕಾಶ್ ಕನ್ನಡಕ್ಕೆ ತಂದಿದ್ದಾರೆ.) ಹೇಲಿಯ ಅಜ್ಜನ-ಅಜ್ಜನ-ಅಜ್ಜನಾದ ಕುಂಟಾಕಿಂಟೆ ಎಂಬ ಆಫ್ರಿಕಾದ ಕರಿಯ, ೧೭೬೭ರಲ್ಲಿ ಅಮೆರಿಕಕ್ಕೆ ಗುಲಾಮನಾಗಿ ಸಾಗಿಸಲ್ಪಟ್ಟಿದ್ದ. ಆ ಕುಂಟಾಕಿಂಟೆಯಿಂದ ತನ್ನವರೆಗಿನ ವಂಶದ ನಿಜಕತೆಯನ್ನು ೧೯೬೫ರಿಂದ ಹನ್ನೆರಡು ವರ್ಷಗಳ ಕಾಲ ಹುಡುಕಿ ಅಧ್ಯಯನ ಮಾಡಿದ ಅಲೆಕ್ಸ್ ಹೇಲಿಯು ಅದಕ್ಕೆ ಕಾದಂಬರಿಯ ರೂಪ ನೀಡಿದ. ಕರಿಯರ ಮೇಲೆ ಬಿಳಿಯರು ಮಾಡಿದ ದೌರ್ಜನ್ಯಗಳಿಗೆ ಜೀವಂತ ಸಾಕ್ಷಿಯಂತಿರುವ ಈ ಕಾದಂಬರಿ ಜಗತ್ತಿನ ೩೭ ಭಾಷೆಗಳಿಗೆ ಅನುವಾದಗೊಂಡಿದೆ. ಅದೆಷ್ಟೊ ಜನ ಕರಿಯರು ಅದನ್ನು ಬೈಬಲ್ಲಿನಂತೆ ಮನೆಯಲ್ಲಿಟ್ಟುಕೊಂಡಿದ್ದಾರೆ.
ಮೂರ್ನಾಲ್ಕು ವರ್ಷಗಳ ಹಿಂದೆ ಓದಿದ್ದ ಆ ಪುಸ್ತಕ ಮೊನ್ನೆಮೊನ್ನೆ ಮತ್ತೆ ಕೈಗೆ ಬಂತು. ಆಗ ಮನೆಯಲ್ಲಿರುವ ಕಬ್ಬಿಣದ ಕರೀ ಪೆಟ್ಟಿಗೆಯೊಂದರಲ್ಲಿ ದಪ್ಪ ಬೈಂಡಿನ ಮೇಲೆ `ಸಂತಾನ ನಕ್ಷೆ' ಅಂತ ಬರೆದಿರುವ ಪುಸ್ತಕದ ನೆನಪಾಯಿತು. ಅಲೆಕ್ಸ್ ಹೇಲಿಯಿಂದ ಏಳು ತಲೆಮಾರುಗಳ ಹಿಂದೆ ಇದ್ದವನು ಕೈರಬಾ ಕುಂಟಾಕಿಂಟೆ. ಅದನ್ನು ಶೋಧಿಸಲು ಅವನಿಗೆ ೧೨ ವರ್ಷಗಳ ಅಧ್ಯಯನ-ತಿರುಗಾಟ ಬೇಕಾಯಿತು. ನನಗೆಷ್ಟು ಸಮಯ ಬೇಕಾದೀತು? ತಕ್ಷಣ ಜಾಲಾಡಿದೆ. ಅದರಲ್ಲಿ ಕ್ಷಣಮಾತ್ರದಲ್ಲಿ ಸಿಕ್ಕ ನಮ್ಮ ತಂದೆ ಮುಖಾಂತರದ ಹಿರಿ ತಲೆಯ ವಂಶಾವಳಿಯನ್ನು ಸುಮ್ಮನೆ ನಿಮ್ಮ ಮುಂದಿಡುತ್ತಿದ್ದೇನೆ. ಸುಧನ್ವಾ ದೇರಾಜೆ-ಸತ್ಯಮೂರ್ತಿ ದೇರಾಜೆ-ದೇರಾಜೆ ಎಂ.ಕೃಷ್ಣಯ್ಯ-ಎಂ.ಗಣಪಯ್ಯ-ಮಂಗಲ್ಪಾಡಿ ಕೃಷ್ಣಯ್ಯ-ಅಜ್ಜನಗದ್ದೆ ಸುಬ್ರಾಯ-ವೆಂಕಟೇಶ್ವರ-ನಾರಾಯಣ ಭಟ್ಟ-ಅಂಣಮರಿ ಗೋವಿಂದ ಹೆಗ್ಗಡೆ. ಹೀಗೆ ನನ್ನಿಂದ ಏಳು ತಲೆಮಾರುಗಳಾಚೆಗಿದ್ದ ಗೋವಿಂದ ಹೆಗ್ಗಡೆಯವರ ಕಾಲ ( ದಕ್ಷಿಣಕನ್ನಡದ ವಿಟ್ಲ ಬಳಿಯ ತಾಳಿಪಡ್ಪು ಎಂಬಲ್ಲಿ ವಾಸವಾಗಿದ್ದರಂತೆ. ನೂರಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ, ಅವರು ವಾಸವಾಗಿದ್ದರೆನ್ನಲಾದ ಮನೆ ಇತ್ತೀಚಿನವರೆಗೂ ಇತ್ತು.) ಸುಮಾರು ೧೭೬೦ನೇ ಇಸವಿ ಆಗಿದ್ದಿರಬಹುದೆಂದು ಅಂದಾಜು ಲೆಕ್ಕ ಹಾಕಿದೆ . ಅಂದರೆ ಕುಂಟಾಕಿಂಟೆಯ ಕಾಲ ! ಆಹಾ, ಖುಶಿಯಾದೆ. ಅಷ್ಟೇ ಅಲ್ಲ, ಅಜ್ಜನ ಫೋಟೊ ಎಲ್ಲರ ಮನೆಗಳಲ್ಲೂ ಇದೆ. ಅಜ್ಜನ-ಅಜ್ಜನ ಫೋಟೊ ಇದೆಯೇ? ನಮ್ಮಲ್ಲಿದೆ ಅನ್ನುವುದು ನನಗೆ ಗರ್ವದ ಸಂಗತಿ. (ಅವಕಾಶವಾದಾಗ ತೋರಿಸುತ್ತೇನೆ)
ಈಗ ಪಿತಾಮಹ ಪ್ರಪಿತಾಮಹರ ನೆನೆದು ನೀವ್ಯಾರಾದರೂ ಎಂಟು ತಲೆಮಾರುಗಳಿಗಿಂತ ಹಿಂದೆ ಹೋಗಬಲ್ಲಿರೇ?
May 24, 2008
ಸನ್ ಆಫ್ . . . . . .
May 05, 2008
ಬೆಳ್ಳೇಕೆರೆಯ ಹಳ್ಳಿ ಥೇಟರ್ -ಅಂಕ ೪
ಆ ವೇಳೆಗೆ ಓದು ಮುಗಿಸಿ ನಾನು ಊರಿಗೆ ಬಂದೆ. ಮನೆಯ ಪರಿಸ್ಥಿತಿಯಿಂದಾಗಿ ನನ್ನ ದುಡಿಮೆಯು ಅನಿವಾರ್ಯವಾಗಿತ್ತು. ಅಪ್ಪ ಕೆಲಸ ಮಾಡುತ್ತಿದ್ದ ಹಾರ್ಲೆ ಗ್ರೂಪ್ ಆಫ್ ಎಸ್ಟೇಟ್ನಲ್ಲಿ ನಾನೂ ಕೆಲಸಕ್ಕೆ ಸೇರಿದೆ. ತೋಟದಲ್ಲಿದ್ದ ಡೈರಿ ಫಾರಂನ ಉಸ್ತುವಾರಿ ನನ್ನ ಉದ್ಯೋಗ. ಆ ಸಮಯದಲ್ಲಿ ನಾನು ಬರೆದ ಕತೆಯೊಂದು 'ಸುಧಾ"ದಲ್ಲಿ ಪ್ರಕಟವಾಗಿತ್ತು. ಹಾಗಾಗಿ ಊರಿನ ಸುತ್ತಮುತ್ತ ಕೆಲವರಲ್ಲಿ 'ರೈಟ್ರು ಮಗ ಕತೆ ಬರೀತಾನಂತೆ" ಎನ್ನುವ ಸುದ್ದಿ ಹಬ್ಬಿತ್ತು. ಆ ಕತೆಯಲ್ಲಿ ನಮ್ಮೂರಿನ ಕೆಲವರ ಚಿತ್ರಣವಿತ್ತು. ಅದನ್ನು ಓದಿದ ಕೆಲವರು, ಅಲ್ಲಲ್ಲಿ ಈ ಬಗ್ಗೆ ಪ್ರಚಾರ ಮಾಡಿದ್ದರಿಂದ ಊರವರಲ್ಲಿ ನನ್ನ ಬಗ್ಗೆ ಕುತೂಹಲ ಮೂಡಿತ್ತಾದರೂ, ಆ ಕಾಲದಲ್ಲಿ ನಮ್ಮೂರಿನಲ್ಲಿ ಕಥೆ ಬರೆಯುವವರೆಲ್ಲ ಕೆಲಸಕ್ಕೆ ಬಾರದ ನಾಲಾಯಕ ಜನರೆಂಬ ಧೃಡವಾದ ನಂಬಿಕೆಯೇ ಹೆಚ್ಚಿನವರಲ್ಲಿ ಇದ್ದುದರಿಂದ " ರೈಟ್ರು ಕಷ್ಟಪಟ್ಟು ಮಗನಿಗೆ ವಿದ್ಯೆ ಕಲಿಸಿದರೆ ಇವನು ಹೀಗಾದನಲ್ಲ' ಎಂದು ನಮ್ಮಪ್ಪನ ಬಗ್ಗೆ ಮರುಕ ತೋರಿದರು!
ಡೈರಿ ಕೆಲಸಗಾರರಾದ ಕೃಷ್ಣ, ಶಿವಪ್ಪ, ಸುಂದರ ಇತ್ಯಾದಿ ಎಲ್ಲರೂ ಹುಡುಗರೇ ಅಲ್ಲದೇ ತೋಟದ ಕೆಲಸಗಾರರಲ್ಲೂ ಅನೇಕ ಹುಡುಗರಿದ್ದರು. ವಿಶ್ವನಾಥ, ಶೇಷಪ್ಪ, ಚೆನ್ನವೀರ, ಮರಗೆಲಸ ಮಾಡುತ್ತಿದ್ದ ಉಗ್ಗಪ್ಪ. ಇವರು ಯಾರೂ ಶಾಲೆಗೇ ಹೋದವರಲ್ಲ. ಎಲ್ಲೋ ಕೆಲವರು ಕಾಟಾಚಾರಕ್ಕೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಇಂಥವರಲ್ಲಿ ಕೃಷ್ಣಪ್ಪ-ವಿಜಯ ಮುಂತಾದ ಎಳೆಯರಿದ್ದರು. ತುರ್ತು ಪರಿಸ್ಥಿತಿಯ ವಿರುದ್ಧ ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿತ್ತು. ಎಡ-ಬಲ ಪಂಥೀಯರೆಲ್ಲ ಒಟ್ಟಾಗಿ ಇಂದಿರಾಗಾಂಧಿಯನ್ನು ವಿರೋಧಿಸುತ್ತಿದ್ದರು. ನಾವು ಕೆಲಸ ಮಾಡುತ್ತಿದ್ದ ಎಸ್ಟೇಟ್ ಮಾಲೀಕರಾದ ಎನ್.ಕೆ.ಗಣಪಯ್ಯ (ಇವರು ಸ್ವತಂತ್ರ ಪಾರ್ಟಿಯ ಉಪಾಧ್ಯಕ್ಷರಾಗಿದ್ದರು, ಮುಂದೆ ಚರಣ್ಸಿಂಗರ ನಿಕಟವರ್ತಿಯಾದರು.) ಇಂದಿರಾಗಾಂಧಿಯನ್ನು ವಿರೋಧಿಸಿ ಜೈಲಿಗೆ ಹೋದರು. ಸಕಲೇಶಪುರದಲ್ಲಿ ಪ್ರತಿವಾರವೂ ಪ್ರತಿಭಟನೆಗಳು ನಡೆಯುತ್ತಿದ್ದವು. ನನ್ನ ಬಾಲ್ಯದ ಹಾನುಬಾಳು ಶಾಲೆಯ ಸಹಪಾಠಿಗಳನೇಕರು ಜೈಲು ಸೇರಿದ್ದರು. ಯುವಕರ ಪೈಕಿ ಸತ್ಯನಾರಾಯಣ ಗುಪ್ತ ಮತ್ತು ಎಚ್. ಎಂ.ವಿಶ್ವನಾಥ್ ಜೈಲಿನಲ್ಲಿ ತೀವ್ರ ಹಿಂಸೆಗೊಳಗಾದರು. (ವಿಶ್ವನಾಥ್ ಈಗ ಸಕಲೇಶಪುರದ ಶಾಸಕರಾಗಿದ್ದಾರೆ.) ನಮ್ಮ ಉಗ್ಗಪ್ಪನೂ ಪ್ರತಿಭಟನೆ ಮಾಡಿ ಜೈಲು ಸೇರಿದ! ಉಗ್ಗಪ್ಪ ಎರಡು ತಿಂಗಳ ಕಾಲ ಜೈಲಿನಲ್ಲಿದ್ದ. ಅವನ ದುಡಿಮೆ ಇಲ್ಲದೆ ಅವನ ಮನೆಯವರಿಗೆ ತುಂಬಾ ತೊಂದರೆಯಾಯಿತು. ಉಗ್ಗಪ್ಪನಿಗಾಗ ಹದಿನೆಂಟು ವರ್ಷ ವಯಸ್ಸಾಗಿದ್ದಿರಬಹುದು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ. ಇವನ ತಾಯಿ ರಾಮಕ್ಕ, ಇವನ ಅಣ್ಣ ಪಾಪಣ್ಣ ಇವರೆಲ್ಲ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಇವರೊಂದಿಗೆ ಗಂಡನನ್ನು ಕಳೆದುಕೊಂಡಿದ್ದ ಇವನ ದೊಡ್ಡಮ್ಮ. ಅಲ್ಲದೆ ತೀರಿಕೊಂಡಿದ್ದ ಇವನ ಚಿಕ್ಕಮ್ಮನ ಒಂದಿಬ್ಬರು ಮಕ್ಕಳು. ಎಲ್ಲರೂ ಇವನೊಂದಿಗೇ ಇದ್ದರು. ಉಗ್ಗಪ್ಪ ಚಿಕ್ಕಂದಿನಲ್ಲಿ ದನ ಕಾಯುತ್ತಾ ಬೆಳೆದವನು. ನಂತರ ಮರಗೆಲಸ ಕಲಿತುಕೊಂಡಿದ್ದು ಸ್ವಂತ ಕೆಲಸ ಮಾಡುತ್ತಿದ್ದ. ಈತನ ತಮ್ಮ ಗುಡ್ಡಪ್ಪನೊಬ್ಬ ಮಾತ್ರ ದೂರದ ಕುಂಬರಡಿ ಶಾಲೆಗೆ ಹೋಗುತ್ತಿದ್ದ. ತೋಟದ ಜನರೆಲ್ಲಾ-ಉಗ್ಗಪ್ಪನಿಗೆ ಬೇಡದ ಕೆಲಸವೆಂದು ಬಯ್ಯತೊಡಗಿದರು. ಇದು ನಮ್ಮಂಥವರಿಗೆ ಹೇಳಿದ ಕೆಲಸವಲ್ಲ ಎಂದು ಹೇಳತೊಡಗಿದರು.ಕರ್ನಾಟಕದಲ್ಲಿ ದೇವರಾಜ ಅರಸರ ಆಡಳಿತ-ಹಿಂದುಳಿದವರಲ್ಲಿ-ಕೂಲಿಕಾರ್ಮಿಕರಲ್ಲಿ-ದಲಿತರಲ್ಲಿ ಹೊಸ ಆಸೆ ಭರವಸೆಗಳನ್ನು ಹುಟ್ಟ್ಟು ಹಾಕಿದ್ದರಿಂದ ಕೆಳವರ್ಗದ ಜನ ಸಾರಾಸಗಟಾಗಿ ಇಂದಿರಾಗಾಂಧಿ ಬೆಂಬಲಕ್ಕೆ ನಿಂತು ಬಿಟ್ಟಿದ್ದರು!
ತೋಟ ಕಾರ್ಮಿಕರ ವರ್ಗವಂತೂ ನೂರಕ್ಕೆ ನೂರು ಇಂದಿರಾಗಾಂಧಿ ಪರವೇ ಇತ್ತು. ನನಗೆ ಈಗಾಗಲೇ ಕೆಲವು ಸಂಘಟನೆಗಳ ಸಂಪರ್ಕ ಇದ್ದುದರಿಂದ ಕರಪತ್ರ ಹಂಚುವುದು, ಕೆಲವು ಭೂಗತ ಪತ್ರಿಕೆಗಳಿಗೆ ವರದಿ ಮಾಡುವುದು ಇತ್ಯಾದಿ ಮಾಡುತ್ತಿದ್ದೆ. ಪ್ರತಿದಿನ ಕೆಲಸ ಮುಗಿದ ನಂತರ ಸಂಜೆ ಸಾಮಾನ್ಯವಾಗಿ ಹುಡುಗರೆಲ್ಲ ಎಸ್ಟೇಟಿನ ಕಾಫಿ ಕಣದಲ್ಲಿ ಸೇರುತ್ತಿದ್ದೆವು. ಕಾಫಿ ಕಣವೂ ತುಂಬಾ ವಿಶಾಲವಾಗಿದ್ದು ಪಕ್ಕದಲ್ಲಿ ಸಾಕಷ್ಟು ಖಾಲಿ ಬಯಲು ಕೂಡಾ ಇತ್ತು. ಅಲ್ಲಿ ಯಾವುದಾದರೂ ಆಟ ಆಡುವುದು, ಬಾರದ ಕಲ್ಲೆಸೆಯುವುದು. ಕೆಲವೊಮ್ಮೆ ಫುಟ್ಬಾಲ್ ಆಡುವುದು ಅಥವಾ ಆವಾಗ ನಮ್ಮಲ್ಲಿ ಯಾರಾದರು ನೋಡಿದ ಸಿನಿಮಾದ ಕತೆಯನ್ನು ಉಳಿದವರಿಗೆ ರಸವತ್ತಾಗಿ ವರ್ಣಿಸುವುದು ಇತ್ಯಾದಿ ಮಾಡುತ್ತಿದ್ದೆವು. ಸಾಮಾನ್ಯವಾಗಿ ನಾನು ಯಾವಾಗಲೂ ರಾಜಕೀಯ ವಿಷಯಗಳನ್ನು ಮಾತಾಡುತ್ತಿದ್ದೆ. ಇದೇ ಸಮಯಕ್ಕೆ ಉಗ್ಗಪ್ಪನೂ ಜೈಲಿನಿಂದ ಬಿಡುಗಡೆಯಾಗಿ ಬಂದ. ನಾನಿದನ್ನು ಬರೆಯುತ್ತಿರುವ ಇಷ್ಟು ವರ್ಷಗಳ ನಂತರ ಈಗಲೂ ಇವನು ಮರಕೆಲಸವನ್ನು ಮಾಡುತ್ತಿದ್ದಾನೆ ಮತ್ತು ನಮ್ಮ ತಂಡದೊಂದಿಗೇ ಇದ್ದಾನೆ. ಉಗ್ಗಪ್ಪ ಶಾಲೆಯ ಮುಖವನ್ನೇ ನೋಡದಿದ್ದರೂ ಆರ್.ಎಸ್.ಎಸ್. ಶಾಖೆಗಳಿಗೆ ಹೋಗಿದ್ದುದರಿಂದ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದ. ಮತ್ತು ಸ್ವಂತವಾಗಿ ಓದಿ ಬರೆಯುವುದನ್ನು ಕಲಿತುಕೊಂಡಿದ್ದ. ಕೆಲವು ಸಾರಿ ನನಗೂ ಅವನಿಗೂ ಭಿನ್ನಾಭಿಪ್ರಾಯದಿಂದಾಗಿ ಜಗಳಗಳು ನಡೆಯುತ್ತಿದ್ದವು. ಆದರೆ ಇಂದಿರಾ ವಿರೋಧದಲ್ಲಿ ನಾವಿಬ್ಬರೂ ಜೊತೆಗಾರರಾಗಿದ್ದೆವು. ನಮ್ಮಿಬ್ಬರನ್ನು ಬಿಟ್ಟರೆ ತೋಟದ ಇಡೀ ಕಾರ್ಮಿಕವರ್ಗ ಇಂದಿರಾ ಬೆಂಬಲಿಗರಾಗಿದ್ದರು.ನಾನು ವಿದ್ಯಾಭ್ಯಾಸ ಮುಗಿಸಿ ಊರಿಗೆ ಬರುವ ವೇಳೆಗೆ ಲಕ್ಷ್ಮಯ್ಯನಿಗೆ ಮದುವೆಯಾಗಿ ಅವನು ಮೈಸೂರು ಜಿಲ್ಲೆಯ ತನ್ನ ಊರಿಗೆ ವಾಪಸ್ ಹೋಗಿದ್ದ. ಅವನ ಕುಟುಂಬದ ಕೆಲವು ಸದಸ್ಯರು ಕಾರಣಾಂತರದಿಂದ ತೋಟವನ್ನು ಬಿಟ್ಟು ಎರಡು ಕಿ.ಮೀ ದೂರದ ಬೆಳ್ಳೆಕೆರೆಗೆ ಹೋಗಿ ನೆಲೆಸಿದ್ದರು.೧೯೭೭ರ ಲೋಕಸಭಾ ಚುನಾವಣೆ ಬಂತು. ಜೈಲಿನಲ್ಲಿದ್ದವರೆಲ್ಲಾ ಬಿಡುಗಡೆಯಾಗಿ ಬಂದಿದ್ದರು. ಕಾಂಗ್ರೆಸ್ ವಿರೋಧಿಯಾಗಿದ್ದ ಉಗ್ಗಪ್ಪನಿಗೆ ಓಟೇ ಇರಲಿಲ್ಲ.(ಆಗ ಮತದಾನದ ವಯೋಮಿತಿ ೨೧ ವರ್ಷ ಇತ್ತು.) ಉತ್ತರ ಭಾರತದಲ್ಲಿ ಸೋತರೂ ಕರ್ನಾಟಕದಲ್ಲಿ ಕಾಂಗ್ರೆಸ್ ಕೋಟೆ ಭದ್ರವಾಗಿತ್ತು. ನಾನು ಮತ್ತು ಉಗ್ಗಪ್ಪ ನಮ್ಮ ಜೊತೆಯವರಲ್ಲಿ ಹಾಸ್ಯದ ವಸ್ತುವಾಗಿದ್ದೆವು. ಆದರೆ ಇಂದಿರಾಗಾಂಧಿ ಸೋತಿದ್ದರಿಂದ ಕೆಳವರ್ಗವೆಲ್ಲ ಆತಂಕಕ್ಕೊಳಗಾಗಿತ್ತು.ನಮ್ಮ ಕಾಫಿಕಣದ ಕೂಟದ ಕೂಟ ಹಾಗೇ ಮುಂದುವರಿದಿತ್ತು. ಪ್ರತಿದಿನವೂ ಬೇರೆಬೇರೆ ವಿಷಯಗಳ ಜೊತೆಯಲ್ಲಿ ರಾಜಕೀಯದ ಬಗ್ಗೆ ಚರ್ಚೆಯಂತೂ ಇದ್ದೇ ಇರುತ್ತಿತ್ತು.
ನಮ್ಮೊಂದಿಗೆ ತೋಟದಲ್ಲಿ ಕೆಲಸಮಾಡುತ್ತಿದ್ದವನೊಬ್ಬನಿಗೆ ಪ್ರತಿದಿನವೂ ಇವುಗಳನ್ನೆಲ್ಲ ಕೇಳಿ ಕೇಳಿ ಸುದ್ದಿ ತಿಳಿಯುವ ಹುಚ್ಚು ಹತ್ತಿ ಬಿಟ್ಟಿತ್ತು. ಯಾರಲ್ಲಿಯೋ ಸಾಲ ಮಾಡಿ ಒಂದು ಸೆಕೆಂಡ್ಹ್ಯಾಂಡ್ ರೇಡಿಯೋವನ್ನು ಕೊಂಡು ತಂದ! ಆ ಕಾಲದಲ್ಲಿ , ಊರಿನ ಶಾನುಭೋಗರಾಗಿದ್ದ ಬೆಳ್ಳೇಕೆರೆಯ ಅನಂತ ಸುಬ್ಬರಾಯರ ಮನೆಯೊಂದನ್ನು ಬಿಟ್ಟು, ಇಡೀ ಊರಿನಲ್ಲೇ ಯಾರ ಮನೆಯಲ್ಲೂ ರೇಡಿಯೋ ಇರಲಿಲ್ಲವಾದ್ದರಿಂದ, ತಾನು ಲೈಸೆನ್ಸ್ ಹಣಕಟ್ಟಿ ರೇಡಿಯೋ ತಂದದ್ದು ಅವನಿಗೆ ದೊಡ್ಡದೇನೋ ಸಾಧಿಸಿದಂತಹ ಹೆಮ್ಮೆಯ ವಿಷಯವಾಗಿತ್ತು। ಸಂತೆಗೆ ಹೋಗುವಾಗಲೂ ಅದನ್ನು ಹೆಗಲಿಗೇರಿಸಿಕೊಳ್ಳುತ್ತಿದ್ದ. ಪ್ರತಿ ದಿನ ಸಂಜೆ ನಮ್ಮ ಕಾಫಿಕಣದ ಕೂಟಕ್ಕೂ ಅದನ್ನು ತರುತ್ತಿದ್ದ. ಆದರೆ ಯಾರಿಗೂ ಅದನ್ನು ಮುಟ್ಟಲು ಬಿಡುತ್ತಿರಲಿಲ್ಲ. ಪ್ರತಿದಿನ ರೇಡಿಯೋದಲ್ಲಿ ಬರುತ್ತಿದ್ದ ವಾರ್ತೆಗಳನ್ನು ತಪ್ಪದೇ ಕೇಳಿಕೊಂಡು, ಅದಕ್ಕೆ ಕೈಕಾಲು- ತಲೆ-ಬಾಲ ಎಲ್ಲ ಸೇರಿಸಿ ವರ್ಣನೆ ಮಾಡಿ ಹೇಳುತ್ತಿದ್ದ. ಯಾರಾದರೂ ಅದು ಹಾಗಲ್ಲವೆಂದು ವಿವರಿಸಲು ಹೋದರೆ "ನೀವು ಏನಾರ ಹೇಳಿ, ನನ್ನ ರೇಡಿಯೋದಲ್ಲಿ ನಾನು ಕೇಳಿದ್ದೀನಿ. ರೇಡಿಯೋ ಯಾಕೆ ಸುಳ್ಳು ಹೇಳುತ್ತೆ?" ಎನ್ನುತ್ತಿದ್ದ!.ಹುಡುಗರೆಲ್ಲ ಅವನಿಗೆ ಹಾಡಿನಪೆಟ್ಟಿಗೆ ಎಂದು ಅಡ್ಡ ಹೆಸರಿಟ್ಟಿದ್ದರು. ಈಗಂತೂ ಕಣದಲ್ಲಿ ಕತ್ತಲಾಗುವವರೆಗೂ ಹುಡುಗರೆಲ್ಲ ಚಿತ್ರಗೀತೆ ಕೇಳಲು ಹಾಡಿನಪೆಟ್ಟಿಗೆ ಸುತ್ತ ಸೇರುತ್ತಿದ್ದರು.ಒಂದು ಸಂಜೆ ಕಣದಲ್ಲಿ ಕೂಟ ಸೇರಿದಾಗ ಚೆನ್ನವೀರ ಚಿತ್ರಗೀತೆ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದಿದ್ದ. ಅವನಿಗೆ ಓದಲು ಬರುತ್ತಿರಲಿಲ್ಲ. ರೇಡಿಯೋದಲ್ಲಿ ಬರುತ್ತಿದ್ದ ಹಾಡನ್ನು ಕೇಳುತ್ತಾ ಪುಸ್ತಕ ತಿರುಗಿಸಿ ನೋಡುತ್ತಿದ್ದ. ಆಗ ಅವನಿಗೆ ೧೩-೧೪ ವರ್ಷ ವಯಸ್ಸಿರಬೇಕು. ಆಗಷ್ಟೇ ತೋಟದ ಕೆಲಸಕ್ಕೆ ಸೇರಿಕೊಂಡಿದ್ದ.' ಪುಸ್ತಕ ನೋಡಿ ಏನು ಮಾಡುತ್ತಿಯೋ ' ಎಂದೆ. ' ಸುಮ್ಮನೆ ನೋಡ್ತೀನಿ' ' ಓದೋದು ಕಲಿ ಸುಮ್ಮನೆ ನೋಡಿ ಏನ್ಮಾಡ್ತಿಯಾ' ಚೆನ್ನವೀರ ಒಂದೆರಡು ಕ್ಷಣ ನನ್ನನ್ನೇ ನೋಡಿ ಒಂದು ರೀತಿಯ ನಿರ್ಧಾರದ ಧ್ವನಿಯಲ್ಲಿ ಹೇಳಿದ "ನೀವು ಹೇಳಿ ಕೊಟ್ರೆ ಕಲಿತೀನಿ "
April 26, 2008
ಗೋ.....ವಾ!
ಅಲ್ಲಿ ಇಲ್ಲದ್ದು ಇರಲಿಲ್ಲ. ಕೊಂಚ ಅತ್ತಿತ್ತ ಸರಿದರೂ ಆ ದಪ್ಪನೆಯ ಹಾಸಿಗೆ ಏರಿಳಿಯುತ್ತಿತ್ತು. ಸಮುದ್ರದಲ್ಲೇ ಇದ್ದೇನೋ ಅಂತ ಮಂಚದ ಕೆಳಗೆ ಕೈಯಾಡಿಸಿ ನೋಡಿಕೊಂಡೆ ! ಎದ್ದು ಟಿವಿ ಹಾಕಿದೆ, ಸರಿ ಹೋಗಲಿಲ್ಲ. ಬಾತ್ಟಬ್ನಲ್ಲಿ ಬಿದ್ದುಕೊಂಡು ಸ್ನಾನ ಮಾಡಿದ್ದು ಸರಿ ಅನಿಸಿರಲಿಲ್ಲ. ನಿಧಾನವಾಗಿ ದೊಡ್ಡ ಗಾಜಿನ ಬಾಗಿಲು ತೆರೆದು, ತೆಳ್ಳಗೆ ಬೆಳಕು ಹರಡಿದ್ದ ಬಾಲ್ಕನಿಗೆ ಹೋಗಿ ಸುಖಾಸೀನನಾದೆ. ಒಳಗಿನ ಎ.ಸಿ. ತಂಪಿಗಿಂತ ಆ ಹವೆಯೇ ಹಿತ ಅನ್ನಿಸಿತು. ಕಿವಿಗೆ ಐಪಾಡ್ ಸಿಕ್ಕಿಸಿಕೊಂಡು ಪದ್ಯಾಣದವರ ಯಕ್ಷಗಾನ ಪದ್ಯ ಕೇಳುತ್ತ ಅದೆಷ್ಟು ಹೊತ್ತು ಕುಳಿತೆನೋ, ರೂಂ ಬಾಯ್ ಹೊರಗಿಂದ ಒಂದೇ ಸಮನೆ ಬೆಲ್ ಒತ್ತುತ್ತಿದ್ದ.
ಹಿಂದಿನ ಸಂಜೆ ನಾಲ್ಕರ ಇಳಿಬಿಸಿಲು. ನಮ್ಮ ಮನೆಯ ಅಂಗಳದಲ್ಲೇ ವಿಮಾನ ಓಡೋಡಿ ನಿಂತಂತೆ ಅನ್ನಿಸಿತು. ಹೌದು ಅದೇ ಕಲ್ಲು, ಹುಲ್ಲು, ಗಿಡ, ವಾತಾವರಣವೂ ಅದೇ. ಷಟ್ಲ್ ಹತ್ತಿ ಕುಳಿತರೆ ನುಣ್ಣನೆಯ ರಸ್ತೆ. ಗೋವಾದ ಏರ್ಪೋರ್ಟ್ನಿಂದ ಸಾಲ್ಸೆಟ್ನ `ಕೋಲ್ವಾಬೀಚ್'ನಲ್ಲಿರುವ `ರಾಮಡಾ ರಿನಾಯ್ಸೆನ್ಸ್ ಬೀಚ್ ರೆಸಾರ್ಟ್'ಗೆ ಅರ್ಧ ಗಂಟೆಯ ಹಾದಿ. ಎತ್ತರೆತ್ತರದ ಕಮಾನು ಕಟ್ಟಡಗಳೊಂದಿಗೆ ಅದು ೨೩ ಎಕರೆಗಳಲ್ಲಿ ಹರಡಿಕೊಂಡಿದೆ . ಅಲ್ಲಿನ ಈಜುಕೊಳದ ಮಧ್ಯೆಯೂ ಪುಟ್ಟ ಹೆಂಡದಂಗಡಿ ! (ಬಹುಶಃ ನೀರು ಬೆರೆಸುವುದೇ ಬೇಡ ಅಂತಿರಬೇಕು . ಹಿನ್ನೆಲೆಯಲ್ಲಿ `ತಾರಕ್ಕ ಬಾಟಲಿಯಾ' ಹಾಡು !) ಅಲ್ಲಿಂದ ಐನೂರು ಮೀಟರು ಸಾಗಿದರೆ ಸಾಗರ . ಅಡಿಗರು ಅಂದಂತೆಯೇ -`ಮಬ್ಬು, ಕಾಮಾಲೆ ಕತ್ತಲು, ಬಂದು ಮೈಮೇಲೆ ಅಬ್ಬರಿಸಿ ಎದ್ದೆದ್ದು ಬಿದ್ದು ಬೊಬ್ಬಿರಿದಲೆವ ಕಾರ್ಮೋಡ/ ಕುಡಿದುಬಿಟ್ಟಿದೆ ಕಣೋ, ಕಡಲ ಪಡಖಾನೆಯಲಿ ನೊರೆಗರೆವ ವ್ಹಿಸ್ಕಿ ಸೋಡಾ! 

]'ಸಮುದ್ರ ಮಧ್ಯೆ ಬೋಟು ನಿಲ್ಲಿಸಿ, ದೂರದಲ್ಲಿ ಡಾಲ್ಫಿನ್ಗಳನ್ನು ತೋರಿಸಿ, ಯಾರು ಹಾರುತ್ತೀರಿ ಸಾಗರಕ್ಕೆ ಅಂತ ಪ್ರಶ್ನೆ ಕೇಳಿದರೆ ಮೊದಲು ಹೂಂ ಅನ್ನುವವರಿಗೆ ಜಂಘಾಬಲ ಗಟ್ಟಿಯೇ ಬೇಕು. ಆ ಗುಜರಾತಿನ ಹುಡುಗಿ ಶಿವಾನಿಗೆ ಎಂಥಾ ಹುಚ್ಚೋ ಏನೋ, ಲೈಫ್ ಜಾಕೆಟ್ ಕಟ್ಟಿಕೊಂಡು ಮೊದಲು ಧುಮುಕಿದ್ದು ಅವಳೇ. ನಂತರ ನಾವೆಲ್ಲ ಮೆಲ್ಲ ಬೋಟಿನ ಸೈಡಿಗೆ ಹೋಗಿ, ಕಾಲ ಬೆರಳಿಗೆ ಮೊದಲು ನೀರು ಸೋಕಿಸಿಕೊಂಡು ಮೇಲಕ್ಕೆತ್ತಿ, ಪುನಃ ಪಾದ ಮುಳುಗುವಷ್ಟು ಸೊಂಟ ಜಾರಿಸಿ, ಮತ್ತೆ ಮೇಲೆ ಬಂದು, `ತುಮ್ ಕೂದ್ನಾ ಚಾಹ್ತೇಹೋ?' ಅಂತ ಪಕ್ಕದವನಿಗೆ ಹೇಳಿ, ಲೈಫ್ಜಾಕೆಟ್ನ್ನು ಮತ್ತೆ ಬಿಚ್ಚಿ ಗಟ್ಟಿಯಾಗಿ ಕಟ್ಟಿಸಿಕೊಂಡು, ಬೆನ್ನು ಬೋಟಿಗೆ ತರಚಿಕೊಳ್ಳುವಂತೆ ...ದುಡುಂ.
ಸ್ಕಾರ್ಲೆಟ್ಳ ನಿಗೂಢ ಸಾವಿನ ಪ್ರಕರಣ ಪ್ರಪಂಚದಾದ್ಯಂತ ಅಲೆ ಎಬ್ಬಿಸಿದ ಮೇಲೂ ಗೋವಾಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖೆಯಲ್ಲಿ ಕಡಿಮೆಯೇನೂ ಆಗಿಲ್ಲವಂತೆ. ಎಲ್ಲೆಲ್ಲಿ ಹೋದರೂ ಅವರೇ. ರಸ್ತೆಗಳಲ್ಲಿ ಬೈಕ್ ಓಡಿಸುತ್ತಾ, ಸೈಕಲ್ ತುಳಿಯುತ್ತಾ, ತೀರಗಳಲ್ಲಿ ಮೈಬಿಚ್ಚಿ ಸೂರ್ಯಸ್ನಾನ ಮಾಡುತ್ತಾ, ಎಲ್ಲೆಲ್ಲೂ ಅವರ ಹಿಂಡು. 


April 22, 2008
ಪ್ರಭುವೆ ನಿನ್ನ ನೆನಪಿನಲ್ಲಿ ...
ಅಕ್ಷರಗಳ ಶಕ್ತಿ ಭಯಂಕರ ಮಾರಾಯ್ರೆ. ಅವುಗಳನ್ನು ಸಲಹುವುದು ಅಷ್ಟು ಸುಲಭ ಅಲ್ಲ. ಅಕ್ಷರಗಳು ಕತೆಯನ್ನೂ ಕತೆ ಅಕ್ಷರಗಳನ್ನೂ ಆವರಿಸಿಕೊಂಡು ಬಂದರಂತೂ ಆ ಚೆಂದವೇ ಬೇರೆ. ಹುಟ್ಟಿನಿಂದ ಸಾವಿನವರೆಗಿನ ಕತೆಯನ್ನು ,ಕೇವಲ ಒಂದು ಪುಟದಲ್ಲಿ ಬರೆದಂತೆ ಅನ್ನಿಸುವ , ಆ ಸರಳ ಸಶಕ್ತ ಶೈಲಿಗೆ ಮರುಳಾಗಿರುವೆ . ತಕ್ಷಣ ವಿಮರ್ಶೆಗೆ ಹೊರಡೋದಕ್ಕಿಂತ ಎದೆಯಲ್ಲಿಟ್ಟುಕೊಂಡು ಅನುಭವಿಸುತ್ತಿರುವಾಗ ಸಿಗುವ ಸುಖವ ಹೇಳುವುದೆಂತು? ಅಷ್ಟಕ್ಕೂ ಅದು ಎಂಥಾ ಕತೆ?
ಒಮ್ಮೆ ಅವಳಿಗಾಗಿ, ಮತ್ತೊಮ್ಮೆ ನಿಮಗಾಗಿ - ದಯವಿಟ್ಟು ಓದಿ. ಏನನ್ನಿಸಿತು ಹೇಳಿ.
ಬೆಳ್ಳೇಕೆರೆಯ ಹಳ್ಳಿ ಥೇಟರ್-ಅಂಕ ೩
ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ.
ನಾನು ಹೈಸ್ಕೂಲ್ ತನಕ ಓದಿದ ಹಾನುಬಾಳಿನ ಸರ್ಕಾರಿ ಶಾಲೆಯಲ್ಲಿ, ಸ್ಕೂಲ್ಡೇಗಳಲ್ಲಿ ಮತ್ತು ಗಣಪತಿ ಹಬ್ಬದಲ್ಲಿ ಶಾಲೆಯಲ್ಲಿ ಗಣಪತಿ ಕೂರಿಸಿದಾಗ, ಅಥವಾ ಗಣರಾಜ್ಯ ದಿನವೋ-ಬೇರೇನಾದರೂ ವಿಶೇಷವೋ- ಹೀಗೆ ಅನೇಕ ಸಂದರ್ಭಗಳಲ್ಲಿ 'ಮಕ್ಕಳಿಂದ ಮನೋರಂಜನೆ' ಇರುತ್ತಿತ್ತು. ಆಗೆಲ್ಲ ನಾನು ಸಾಮಾನ್ಯವಾಗಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ಹೈಸ್ಕೂಲಿನಲ್ಲಿ ವಿಶ್ವನಾಥರಾವ್ ಅಂತ ಹೆಡ್ಮಾಸ್ತರಿದ್ದರು. ಬಿಡುವಿನಲ್ಲಿ ಶೇಕ್ಸ್ಪಿಯರ್-ಇಬ್ಸೆನ್, ಕಾಳಿದಾಸ, ಕೈಲಾಸಂ ಅವರ ನಾಟಕಗಳನ್ನು, ಮುದ್ದಣನ ರಾಮಾಶ್ವಮೇಧ, ಜಿ.ಪಿ. ರಾಜರತ್ನಂ ಕವನಗಳು-ಮಂಕುತಿಮ್ಮನ ಕಗ್ಗ ಇತ್ಯಾದಿಗಳನ್ನು ಓದಿ ಹೇಳುತ್ತಿದ್ದರು. ಹೈಸ್ಕೂಲಿನಲ್ಲಿ ಪ್ರತಿ ಸ್ಕೂಲ್ ಡೇಯಲ್ಲೂ ನಾಟಕವಂತೂ ಇದ್ದೇ ಇರುತ್ತಿತ್ತು. ನಾನು, ಉಮೇಶ, ರಾಜಶೇಖರ, ಕುಮಾರ ನರಸಿಂಹ, ರಜಾಕ್, ರಾಮಚಂದ್ರ ಹೀಗೇ ನಾವೊಂದಷ್ಟು ಹುಡುಗರ ಪಟಾಲಂ ಇಲ್ಲದೇ ಸ್ಕೂಲ್ ಡೇ ಇರುತ್ತಿರಲಿಲ್ಲ. ಶೇಕ್ಸ್ಪಿಯರ್ನ ' ಟೇಮಿಂಗ್ ಆಫ್ ದಿಶ್ರೂ' ಕನ್ನಡ ರೂಪಾಂತರ 'ಗಯ್ಯಾಳಿ ಗಂಡ 'ದಲ್ಲಿ ನಾನು ಗಯ್ಯಾಳಿ ಪಾತ್ರ ಮಾಡಿದ್ದೆ. ನನ್ನ ಮತ್ತು ಉಮೇಶನ ನೀಗ್ರೋ ಡ್ಯಾನ್ಸ್ ಪ್ರತಿ ವರ್ಷ ಇರಲೇಬೇಕಿತ್ತು. ಹೀಗಾಗಿ ನಾನೊಬ್ಬ ಭಯಂಕರ ಕಲಾವಿದನೆಂದು ನಂಬಿಕೊಂಡು ಬಿಟ್ಟಿದ್ದೆ!ಹೈಸ್ಕೂಲ್ ಮುಗಿಸಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಸೇರಿದೆ. ಹಾಸ್ಟೇಲಿನಲ್ಲಿ ವಾಸ. ಪಿ.ಯು ಕ್ಲಾಸಿನಲ್ಲಿ ರಾಮದಾಸ್ ಲೆಕ್ಚರರ್ ಆಗಿದ್ದರು. ಗೋಪಾಲಕ್ರಷ್ಣ ಅಡಿಗರು ಪ್ರಿನ್ಸಿಪಾಲ್.
ಆಗಷ್ಟೇ ಗಿರೀಶ ಕಾರ್ನಾಡರ ತುಘಲಕ್ ಪ್ರಚಾರಕ್ಕೆ ಬಂದಿತ್ತು. ಕಾಲೇಜ್ ಡೇ ಗೆ ರಾಮದಾಸರು 'ತುಘಲಕ್ ' ತೆಗೆದುಕೊಳ್ಳಲಿದ್ದಾರೆಂದು ಸುದ್ದಿ ಹಬ್ಬಿತ್ತು. ನೋಟೀಸ್ ಬೋರ್ಡಿನಲ್ಲಿ-ನಾಟಕಕ್ಕೆ ಸೇರಬಯಸುವವರೆಲ್ಲ ಸಂಜೆ ಕಾಲೇಜಿನ ಗ್ಯಾಲರಿ ಹಾಲಿನಲ್ಲಿ ಸೇರಬೇಕೆಂದು- ನೋಟೀಸು ಹಚ್ಚಿದ್ದರು. ನಾನಾಗಲೇ ಹಾಸ್ಟೇಲಿನಲ್ಲಿ -ನಾನೊಬ್ಬ ನಟ ಭಯಂಕರ ಎಂಬಂತೆ ಚಿತ್ರಿಸಿಕೊಂಡಿದ್ದೆ. ಆದ್ದರಿಂದ ನನ್ನ ರೂಂಮೇಟ್ಗಳು ' ನಾಟಕಕ್ಕೆ ನೀನು ಸೇರುವುದಿಲ್ಲವೇ ?' ಎಂದು ಪ್ರಶ್ನಿಸಿದರು. ವಾಸ್ತವವಾಗಿ ನಾನು ನೋಟೀಸನ್ನಾಗಲೀ ಅದರಲ್ಲಿ ಹಾಕಿದ ದಿನಾಂಕವನ್ನಾಗಲಿ ನೋಡಿರಲೇ ಇಲ್ಲ. ಕೇಳಿದವರಿಗೆಲ್ಲಾ 'ನಾಳೆ ನಾಳಿದ್ದರಲ್ಲಿ ಸೇರುತ್ತೇನೆ ' ಎಂದು ಉಡಾಫೆ ಮಾತಾಡಿದೆ. ಕೆಲವರು ಮುಖ ಮುಖ ನೋಡಿಕೊಂಡು ಸುಮ್ಮನಾದರು.ಎರಡು ದಿನ ತಡವಾಗಿ ಗ್ಯಾಲರಿ ಹಾಲ್ಗೆ ಹೋದೆ. ಅಲ್ಲಿ ಮೂವ್ವತ್ತು, ನಲವತ್ತು ಜನ ಸೇರಿದ್ದರು. ರಾಮದಾಸರು ಅವರೊಂದಿಗೆ ಗಂಭೀರವಾಗಿ ಚರ್ಚೆ ನಡೆಸಿದ್ದರು. ನಾನು ಒಳಗೆ ಬರಲೇ ಸಾರ್ ಎಂದು ಕೇಳಿ ಉತ್ತರಕ್ಕೂ ಕಾಯದೆ ಒಳಗಡೆ ಹೋಗಿ ಕುಳಿತೆ. ನನ್ನನ್ನು ಯಾರೂ ಗಮನಿಸಿದಂತೆ ಕಾಣಲಿಲ್ಲ. ಸ್ವಲ್ಪ ಹೊತ್ತಿನ ನಂತರ ರಾಮದಾಸರು ನನ್ನನ್ನು ನೋಡಿ ಕೇಳಿದರು.' ಯಾಕೆ ಬಂದಿದ್ದೀಯ ?' ' ನಾಟಕಕ್ಕೆ ಸೇರೋಣಾಂತ ಸಾರ್' ' ಸರಿ ಸರಿ ತಮಗೇನಾದರೂ ಅನುಭವ ಉಂಟೋ ?' ರಾಮದಾಸರ ಮಾತಿನಲ್ಲಿದ್ದ ವ್ಯಂಗ್ಯ ನನ್ನ ತಲೆಗೆ ನುಗ್ಗಲಿಲ್ಲ. ಪ್ರೈಮರಿ ಶಾಲೆಯಿಂದ ಹೈಸ್ಕೂಲ್ನವರೆಗೆ ನಟಿಸಿದ-ಕುಣಿದ ಎಲ್ಲವನ್ನೂ ಪಟ್ಟಿ ಮಾಡಿ ಹೇಳಿ ರಾಜ್ಕುಮಾರ್ ಸ್ಟೈಲ್ನಲ್ಲಿ ನಿಂತೆ. ' ತಮಗೆ ತುಂಬ ಅನುಭವವಿದೆ. ಕುಳಿತುಕೊಳ್ಳಿ ' ಎಂದರು. ಉಳಿದವರು ಮುಸಿ ಮುಸಿ ನಕ್ಕದ್ದು ಕಂಡರೂ ಇವರಿಗೇನು ಗೊತ್ತು ನನ್ನ ಯೋಗ್ಯತೆ ಎಂದುಕೊಂಡು ಗತ್ತಿನಲ್ಲಿ ಇದ್ದೆ.
ಒಂದೆರಡು ದಿನ ಕಳೆದಂತೆ -ನಾಟಕದ ರೀಡಿಂಗ್-ಇತ್ಯಾದಿ ಪ್ರಾರಂಭಿಸಿದರು. ಪಾತ್ರ ಗಳನ್ನು ಹಂಚದೆ ಇವರೇನು ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ ಎಂದುಕೊಂಡೆ. ನಿಜವಾದ ಸಂಗತಿಯೆಂದರೆ ನಾನು "ತುಘಲಕ್' ನಾಟಕದ ಹೆಸರನ್ನು ಮಾತ್ರ ಕೇಳಿದ್ದೆನೇ ಹೊರತು ಅದನ್ನು ಓದುವುದಿರಲಿ ಅದರ ಬಗ್ಗೆ ಏನೊಂದೂ ಗೊತ್ತಿರಲಿಲ್ಲ. ಮತ್ತೂ ಒಂದೆರಡು ದಿನ ಅಲ್ಲಿಗೆ ಹೋಗದೆ ಚಕ್ಕರ್ ಹೊಡೆದೆ. ಯಾವತ್ತು ಪಾತ್ರ ಹಂಚುತ್ತಾರೆಂದು ಸುದ್ದಿ ತಿಳಿದುಕೊಂಡು ಆ ದಿನ ರಿಹರ್ಸಲ್ ಹಾಲಿಗೆ ಹೋದೆ. ಅವತ್ತು ಎಲ್ಲರಿಗೂ ಅವರವರ ಪಾತ್ರವನ್ನು ತಿಳಿಸುತ್ತ ಹೋದರು. ಆದರೆ 'ತುಘಲಕ್' ಯಾರು ಮಾಡುತ್ತಾರೆಂದು ಮಾತ್ರ ಹೇಳಲಿಲ್ಲ. ಪಾತ್ರ ಕೊಟ್ಟವರಿಗೂ ಸಹಾ ಯಾವುದೇ ಸಂದರ್ಭದಲ್ಲೂ ನಿಮ್ಮ ಪಾತ್ರಗಳು ಬದಲಾಗಬಹುದೆಂದು ಹೇಳಿದರು. ನನಗೆ ಏನನ್ನೂ ಹೇಳಲಿಲ್ಲ. ಆ ದಿನ ಹಾಗೇ ವಾಪಸ್ ಬಂದೆ. ನನ್ನ ಪಾತ್ರದ ಬಗ್ಗೆ ಕೇಳಿದವರಿಗೆಲ್ಲ " ಮುಖ್ಯ ಪಾತ್ರಗಳನ್ನು ಇನ್ನೂ ಹಂಚಿಲ್ಲ" ವೆಂದು ಹೇಳಿದೆ. ಇನ್ನೂ ಒಂದೆರಡು ದಿನ ಕಳೆದರೂ ನನಗೆ ಯಾವ ಪಾತ್ರವನ್ನೂ ಕೊಡಲಿಲ್ಲ. ತಡೆಯಲಾರದೆ ಜೊತೆಯವನೊಬ್ಬನನ್ನು ಕೇಳಿದೆ."ತುಘಲಕ್ ಪಾತ್ರ ಯಾರು ಮಾಡ್ತಾರೆ?' 'ಹುಚ್ಚ ಇನ್ನೂ ಗೊತ್ತಾಗಲಿಲ್ಲವೇ!? ತುಘಲಕ್ ಅವರೇ ಮಾಡುತ್ತಾರೆ' ಬಂತು ಉತ್ತರ. ನಾನು ಭೂಮಿಗಿಳಿದು ಹೋದೆ. ನನಗೆ ಕೊಡಲು ಯಾವ ಪಾತ್ರವೂ ಉಳಿದಿಲ್ಲ. ಈಗ ನಾನು ಇಕ್ಕಟ್ಟಿಗೆ ಸಿಕ್ಕಿದೆ. ಪಾತ್ರ ಸಿಗಲಿಲ್ಲವೆಂದು ರಿಹರ್ಸಲ್ಗೆ ಬರುವುದನ್ನು ನಿಲ್ಲಿಸಿದರೆ ಹಾಸ್ಟೆಲ್ನಲ್ಲಿ ನಾನೇ ಪ್ರಚಾರ ಮಾಡಿದ ನನ್ನ 'ನಟ ಸಾರ್ವಭೌಮ' ಇಮೇಜ್ ಹಾಳಾಗುತ್ತಿತ್ತು. ಆದರೆ ಇಲ್ಲಿ ಬಂದೇನು ಮಾಡುವುದು? ಹಾಗಾಗಿ ನಾಚಿಕೆ ಬಿಟ್ಟು ರಾಮದಾಸರಲ್ಲಿ ಹೇಳಿದೆ. 'ಸಾರ್ ನೀವು ನನಗೇನು ಹೇಳಲಿಲ್ಲ' ' ಹೇಳ್ತೇನೆ ಇರು' ಎಂದರು- ಆದರೆ ಏನನ್ನೂ ಹೇಳಲಿಲ್ಲ. ವಿಧಿಯಿಲ್ಲದೆ ರಿಹರ್ಸಲ್ ಹಾಲ್ಗೆ ಬರತೊಡಗಿದೆ. ಆದರೆ ದಿನಗಳೆದಂತೆ ನಿಧಾನಕ್ಕೆ ನನಗೆ ಭಯ ಆವರಿಸಿಕೊಂಡಿತು. ನಾನು ಪಾತ್ರ ಸಿಗದೇ ಬಚಾವಾದೆ ಅನ್ನಿಸತೊಡಗಿತು. ರಾಮದಾಸರು ಪಾತ್ರಮಾಡುತ್ತಿದ್ದ ರೀತಿ, ಶೈಲಿ, ಆ ವಿಚಾರಗಳು ಎಲ್ಲವೂ ನನಗೆ ಹೊಸತೇ. ಪ್ರತಿ ದಿನವೂ ರಿಹರ್ಸಲ್ ಹಾಲ್ಗೆ ಎಲ್ಲರಿಗಿಂತ ಮೊದಲು ಹಾಜರಾಗತೊಡಗಿದೆ. ಕೊನೆತನಕ ಅಲ್ಲೇ ಕೂರುತ್ತಿದ್ದೆ. ಇದರಿಂದ ಕೆಲವು ಸಾರಿ ನನಗೆ ರಾತ್ರಿ ಊಟ ತಪ್ಪುತ್ತಿತ್ತು. ರಾಮದಾಸ್ ತುಘಲಕ್ ಪಾತ್ರವನ್ನು ಚೆನ್ನಾಗಿ ಮಾಡುತ್ತಿದ್ದರು.ಗ್ರಾಂಡ್ ರಿಹರ್ಸಲ್ ದಿನ ನನಗೆ ತುಂಬ ದುಃಖವಾಯಿತು. ಹೈಸ್ಕೂಲಿನಲ್ಲಿ 'ಟೇಮಿಂಗ್ ಆಫ ದಿ ಶ್ರೂ' ವಿನ 'ಗಯ್ಯಾಳಿ', 'ಶಂಖವಾದ್ಯ'ದ 'ಶಂಕರ ರಾಯ' ಇತ್ಯಾದಿ ಪಾತ್ರಗಳನ್ನು ಮಾಡಿ ನಟಭಯಂಕರನಾಗಿದ್ದ ನನಗೆ ಒಂದು ಸಣ್ಣ ಪಾತ್ರವೂ ಇರಲಿಲ್ಲ! ಗೆಳೆಯರ ಎದುರು ನಗೆಪಾಟಲಾಗಿದ್ದೆ. ನನ್ನ 'ನಟಸಾರ್ವಭೌಮ' ಇಮೇಜು ಚಿಂದಿಯಾಗಿ ಹೋಗಿತ್ತು!
ರಿಹರ್ಸಲ್ ಮುಗಿಯಿತು. ನಾಟಕ ಚೆನ್ನಾಗಿ ಬರುತ್ತಿತ್ತು. ರಾಮದಾಸ್ರ ಅಭಿನಯ ಅದ್ಭುತ ಎನ್ನುವಂತೆ ಇತ್ತು. ನಾನು ಕಣ್ಣಲ್ಲಿ ನೀರು ತುಂಬಿಕೊಂಡು ಒಂದು ಮೂಲೆಯಲ್ಲಿ ಕೂತಿದ್ದೆ. ರಾಮದಾಸ್ ನನ್ನನ್ನು ಕರೆದರು. ಅವರಿಗೆ ನನ್ನ ಹೆಸರು ಸಹ ಸರಿಯಾಗಿ ಗೊತ್ತಿರಲಿಲ್ಲ! ಆಗ ಸರಿಯಾಗಿ ಕೇಳಿ ತಿಳಿದುಕೊಂಡರು. 'ನಾನು ನಿನಗೆ ಸ್ವಲ್ಪ ಅನ್ಯಾಯ ಮಾಡಿದೆ ಅನ್ನಿಸ್ತಾ ಇದೆ. ಇಲ್ಲಿ ಪಾತ್ರ ಮಾಡಿರುವ ಅನೇಕರಿಗೆ ನಿನ್ನಷ್ಟು ನಿಷ್ಠೆ ಇಲ್ಲ. ಈ ಆಸಕ್ತಿ ಬಿಡಬೇಡ ನೀನು ತುಂಬ ಕಲಿಯುತ್ತೀಯಾ' ಎಂದರು. ಮನಸ್ಸು ಹಗುರವಾಯಿತು.ಮುಂದೆ ಉಡುಪಿಯಲ್ಲಿ ಇರುವವರೆಗೂ ನಾನು ಯಾವುದೇ ನಾಟಕದಲ್ಲಿ ಪಾತ್ರ ವಹಿಸಲಿಲ್ಲ. ಬಿ.ಆರ್.ನಾಗೇಶ್, ಉದ್ಯಾವರ ಮಾಧವಾಚಾರ್ಯ ಇವರೆಲ್ಲ ನಾಟಕಗಳನ್ನು ಮಾಡಿಸುತ್ತಿದ್ದರು. ಬಾದಲ್ ಸರ್ಕಾರರ 'ಏವಂ ಇಂದ್ರಜಿತ್' ನಾಟಕವನ್ನು ಬಿ.ವಿ.ಕಾರಂತರು ಉಡುಪಿಗೆ ತಂದಿದ್ದರು. ರಾಮದಾಸ್ ನಮಗೆಲ್ಲ ತಿಳಿಸಿ ಆ ನಾಟಕವನ್ನು ನೋಡಲು ಹೇಳಿದ್ದರು. ಉಡುಪಿಯಲ್ಲಿದ್ದಾಗ ಅನೇಕ ಹೊಸ ನಾಟಕಗಳನ್ನು ನೋಡಿದೆ. ಸಾಧ್ಯವಾದಾಗಲೆಲ್ಲ ನಮ್ಮ ಕಾಲೇಜಿನಲ್ಲಿ ನಡೆಯುತ್ತಿದ್ದ ರಿಹರ್ಸಲ್ಗಳಿಗೂ ಹೋಗಿ ಕೂತಿರುತ್ತಿದ್ದೆ. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲೂ ಹೊಸ ನಾಟಕಗಳ ಪ್ರಯೋಗಗಳಾಗುತ್ತಿದ್ದವು. ಬಿ.ವಿ.ಕಾರಂತರ ಪ್ರಯೋಗಗಳ ಬಗ್ಗೆ ಚರ್ಚೆಗಳಾಗುತ್ತಿದ್ದವು. ಹೆಗ್ಗೋಡಿನ ಬಗ್ಗೆ ಅಲ್ಲಲ್ಲಿ ಮಾತು ಕೇಳಿಬರುತ್ತಿತ್ತು. ನಮ್ಮಂಥವರಿಗೆ ಹೊಸಬಗೆಯ ನಾಟಕಗಳ ಲೋಕವೊಂದು ತೆರೆದುಕೊಳ್ಳುತ್ತಿತ್ತು.
April 07, 2008
ಆಕ್ಸಿಡೆಂಟಿಗೆ ಶುಭ ಹಾರೈಸುತ್ತಾ...
ರೈಲ್ವೆ ಕ್ರಾಸಿಂಗ್ನಲ್ಲಿ ಉಗಿಬಂಡಿ ಢಿಕ್ಕಿಯಾಗಿ, ಕಾರಿನಲ್ಲಿದ್ದ ಒಂದು ಗಂಡು ಒಂದು ಹೆಣ್ಣು ಜೀವ ಕಳೆದುಕೊಂಡಿವೆ. ಅವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಇತ್ತು ಅನ್ನುತ್ತಿವೆ ಕೆಲವು ಪತ್ರಿಕೆಗಳು. ಅವರು ಸಿಕ್ಕಾಪಟ್ಟೆ ಕುಡಿದಿದ್ದರು ಅನ್ನುತ್ತಾರೆ ಕೆಲವರು. ಡ್ರೈವಿಂಗ್ ಸೀಟಿನಲ್ಲಿದ್ದ ಅವನಿಗೆ ಡ್ರೈವಿಂಗೇ ಬರುತ್ತಿರಲಿಲ್ಲ ಅಂತಲೂ ಹೇಳುತ್ತಾರೆ. ಸಹೋದ್ಯೋಗಿಯೊಂದಿಗೆ ಸತ್ತ ತನ್ನ ಹೆಂಡತಿಯ ಮರಣ ಕಾರಣ ಭೇದಿಸುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಕಂ ನಾಯಕ ರಮೇಶ್ ಅರವಿಂದ್.
ಆದರೆ ಮಜಾ ನೋಡಿ- ಸಾಫ್ಟ್ವೇರ್ ಮಿತ್ರರು ಸೇರಿ ನಿರ್ಮಿಸಿರುವ, ಕಾರ್ಪೊರೇಟ್ ಗಂಧವಿರುವ ಈ ಚಿತ್ರದಲ್ಲಿ, ತೀರಿಹೋದ ಪತ್ನಿಯ ಬಗೆಗಿರುವಷ್ಟೇ ಪ್ರೀತಿ, ಸಾವಿನ ರಹಸ್ಯವನ್ನು ಭೇದಿಸುವುದರಲ್ಲೂ ನಾಯಕನಿಗಿದೆ ! ಆಕ್ಸಿಡೆಂಟ್ ನಡೆದಾಗ, ತನ್ನ ಸಹೋದ್ಯೋಗಿ (ಪೂಜಾಗಾಂಧಿ) ಜತೆ ವಿಶೇಷ ಪರಿಣತಿಗಾಗಿ ಅಮೆರಿಕಕ್ಕೆ ಹೋಗಿದ್ದಾನೆ ಈ ರೇಡಿಯೊ ಜಾಕಿ ರಮೇಶ್. ನಂತರದ ಘಟನಾವಳಿಯಲ್ಲೂ ಒಳ್ಳೆಯ ಸ್ನೇಹಿತೆಯಾಗಿ ಆಕೆ ಇವನ ಜತೆಗೇ ಇರುತ್ತಾಳೆ. 'ಇಲ್ಲಿ ನಾಯಕನ ನೋವು ಪ್ರೇಕ್ಷಕನದ್ದಾಗುವುದಿಲ್ಲ' ಹೌದು. ಆದರೆ ಗಂಡ ಅಳುಮುಂಜಿಯಾಗದೆ, ಸಾವು ಕೌಟುಂಬಿಕ ಘಟನೆಯಾಗದೆ, ಅದರ ರಹಸ್ಯವನ್ನು ಬಿಚ್ಚುವ ಕೆಲಸದಲ್ಲಿ ಸಮಾಜದ ಅನೇಕ ವಿಷಕೊಂಡಿಗಳು ಕಳಚಿಕೊಳ್ಳುತ್ತವೆ. ಹೆಂಡತಿಯ ಸಮಾಜಸೇವೆಯನ್ನು ನಿರ್ಲಕ್ಷಿಸುತ್ತಿದ್ದ, ಉಳಿದವರ ಉಸಾಬರಿ ನಮಗೇಕೆ ಅನ್ನುತ್ತಿದ್ದ ಗಂಡನೇ, ಪತ್ನಿಯ ಸಾವಿನ ರಹಸ್ಯದ ಬಾಹ್ಯ ಸಂಬಂಧಗಳ ಗಂಟನ್ನು ಬಿಚ್ಚಲು ಹೊರಟಿದ್ದಾನೆ. ಲೋಕದ ಡೊಂಕನ್ನು ತನಗರಿವಿಲ್ಲದಂತೆಯೇ ನಿವಾರಿಸುತ್ತಿದ್ದಾನೆ!
ಇಲ್ಲಿ ಸಂಶಯದ ದೃಷ್ಟಿ ಒಂದು ಪಾತ್ರದಿಂದ ಇನ್ನೊಂದಕ್ಕೆ ಬದಲಾಗುತ್ತಲೇ ಹೋಗುತ್ತದೆ. ಆದರೆ ಎಲ್ಲ ಪತ್ತೇದಾರಿ ಘಟನಾವಳಿಯಲ್ಲೂ ಬಹಳ ಸಲ ಸಿಲ್ಲಿ ಅನ್ನಿಸದ ಹಾಗೆ ರಮೇಶ್ ಜಾಗರೂಕರಾಗಿದ್ದಾರೆ. ಉದ್ದ ಜಡೆ ಬಿಟ್ಟುಕೊಂಡ, ನಕಲಿ ಸಿಡಿ ದಂಧೆಯ, ಹರಾಮ್ಖೋರನ ಪಾತ್ರದಲ್ಲಿ ಹೊಸಬ ಲೊಂಗಾ ಮಹೇಶ್ ಅಭಿನಯ ಸವಿಯುವಂತಿದೆ. (ಅವರು ದೂರದೂರಿನಲ್ಲಿ ರೇಡಿಯಾಲಜಿಸ್ಟ್ ಅಂತೆ). ಪ್ರಯೋಗರಂಗ ತಂಡದ 'ನಮ್ಮ ನಿಮ್ಮೊಳಗೊಬ್ಬ', 'ಮೈಸೂರು ಮಲ್ಲಿಗೆ' ನಾಟಕಗಳಲ್ಲಿ ರಾಜೇಂದ್ರ ಕಾರಂತರ ಅಭಿನಯ ಕಂಡು ಬೆರಗಾದವರಿಗೆ ಆಕ್ಸಿಡೆಂಟ್ನಲ್ಲಿ ಮತ್ತೊಂದು ರಸದೌತಣ। ಹೆಲ್ತು ಮಿನಿಸ್ಟರು ಚಂದ್ರಪ್ಪನ ಮೂಲಕ. ಇಲ್ಲಿ ಮಂತ್ರ-ಉಗುಳು ಎರಡೂ ಜಾಸ್ತಿ, ನೋಡಿ ಬೇಕಾದರೆ ! ಈ ಎರಡು ಪಾತ್ರಗಳು ವಿಶೇಷ ಮ್ಯಾನರಿಸಂ ಮೂಲಕ ರಮೇಶ್ ಅಭಿನಯವೇ ಕೊಂಚ ಮಂಕಾಗುವಂತೆ ಮಾಡಿವೆ.
ಸತ್ತುಹೋದ ಗಂಡಸಿನ ತಂದೆಯ ಪಾತ್ರದಲ್ಲಿ ದತ್ತಣ್ಣ, ಹುಚ್ಚರಾಗಿ ಎರಡೇ ಎರಡು ದೃಶ್ಯಗಳಲ್ಲಿ ಕಾಣಿಸಿಕೊಂಡದ್ದು ಸಾರ್ಥಕವಾಗಿದೆ. ನಿರ್ದೇಶಕ ದಿನೇಶಬಾಬು, ಇಲ್ಲಿ ಪ್ರಮುಖ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ಕೆಲಸ ಮಾಡಿದ್ದಾರೆ. 'ಶಿಳ್ಳೆಖ್ಯಾತ' ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಮಾಡಿದ ಒಂದು ಐಟಮ್ ಸಾಂಗು ಮತ್ತು ರಮೇಶ್ ವಿರಹದುರಿಯಲ್ಲಿ ಹಾಡುವ ಎರಡು ಗೀತೆಗಳು ಒಂದೆರಡು ಬಾರಿ ಕೇಳುವಂತಿವೆ. ಇನ್ನು ರೇಖಾ, ಮೋಹನ್, ತಿಲಕ್ ಎಲ್ಲರೂ ತಮ್ಮ ಪಾತ್ರಗಳಲ್ಲಿ ತಲ್ಲೀನರಾಗಿದ್ದಾರೆ. ಅಪರೂಪಕ್ಕೆ ಗಾಂಧಿನಗರಕ್ಕೆ ಕಾಲಿಟ್ಟಿರುವ ಹಿರಿಯರಾದ ಜಿ.ಎಸ್. ಭಾಸ್ಕರ್ರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಸಂಕಲನದಲ್ಲಿರುವ ಬಿಗಿ ಚಿತ್ರಕ್ಕೆ ವಿಶೇಷ ಮೆರುಗು, ಗತಿಯನ್ನು ಕರುಣಿಸಿದೆ. ಪಿವಿಆರ್ನಲ್ಲಿ ಹಾಸ್ಯ ಸಿನಿಮಾ 'ಸತ್ಯವಾನ್ ಸಾವಿತ್ರಿ' ನೋಡಿ, ನಾನು ಅಳುವಂತೆ ಮಾಡಿದ್ದ ರಮೇಶ್ ಈ ಬಾರಿ ಖುಶಿಕೊಟ್ಟಿದ್ದಾರೆ.
ಧನಪಿಪಾಸೆ, ಸಮಾಜಸೇವಕರ ಕಷ್ಟ, ಸಾಮ್ರಾಜ್ಯಶಾಹಿ ಕಂಪನಿಗಳ ದುಷ್ಕೃತ್ಯ, ಮಿನಿಸ್ಟ್ರ ದಗಲ್ಬಾಜಿ, ಐಎಎಸ್ ಆಫೀಸರ್ ಸಂದಿಗ್ಧ, ಭೂಗತಲೋಕದ ದಾರಿ...ಹೀಗೆ ಟಿ.ಎನ್. ಸೀತಾರಾಂ ೫೦ ವಾರಗಳ ಧಾರಾವಾಹಿಯಲ್ಲಿ ಹೇಳುವುದನ್ನು ರಮೇಶ್ ೨ ಗಂಟೆಗಳಲ್ಲಿ ಹೇಳುವುದಕ್ಕೆ ಯತ್ನಿಸಿದ್ದಾರೆ. ಆದರೆ ಇದು ಕೇವಲ 'ಮರ್ಡರ್ ಮಿಸ್ಟರಿ' ಕಥಾನಕ ಅನ್ನುವ ತಪ್ಪುಗ್ರಹಿಕೆ ಮೂಡಿಸುವಂತಿರುವುದು ಸಿನಿಮಾದ ಕೊನೆಯ ದೃಶ್ಯ. ಮಾಮೂಲಿ ಹಾಹೂ ಫೈಟುಗಳೂ ಇಲ್ಲದೆ ಒಂದೇಒಂದು ಗುಂಡಿನ ಕಾಳಗವಿರುವ ('ಇಂತಿ ನಿನ್ನ ಪ್ರೀತಿಯ'ದಂತೆ ಅಲ್ಲ !) ಸಿನಿಮಾದಲ್ಲಿ, ಮರ್ಡರ್ ಮತ್ತು ಮಿಸ್ಟರಿ ಬೇರೆಬೇರೆಯಾಗಿ ಪ್ರೇಕ್ಷಕರಿಗೆ ಕಾಣಲೆಂದು ನನ್ನ ಆಸೆ.
